Monday, December 22, 2008

ಇದು ವ್ಯವಹಾರ ಅಂದ್ರೆ...!


ನಮಗೆ ಬರುವ ಈ - ಮೇಲ್ ಗಳಲ್ಲಿ ಹಲವಾರು ಕಥೆಗಳಿರುತ್ತವೆ; ಕವಿತೆಗಳಿರುತ್ತವೆ; ಆಶ್ಚರ್ಯ ತರಿಸುವ ಸಂಗತಿಗಳು
ಇರುತ್ತವೆ. ಮೊನ್ನೆ ನಮ್ಮ ಹರೀಶಣ್ಣ ಕಳುಹಿಸಿದ ಮೇಲ್‌ನಲ್ಲಿ ಅಚ್ಚರಿಯ ಸಾಲುಗಳಿದ್ದವು. ಅದನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ. ಓದಿ ನೋಡಿ, ನಿಮಗೂ ಇಷ್ಟವಾಗಬಹುದು...

ಬ್ಯುಸಿನೆಸ್ ಲಾಜಿಕ್ಸ್ ಹೀಗಿರಬೇಕಂತೆ....
- ಅಪ್ಪ: ನಾನು ಆಯ್ಕೆ ಮಾಡಿರುವ ಹುಡುಗಿಯನ್ನೇ ನೀನು ಮದುವೆಯಾಗಬೇಕು.
- ಮಗ: ನನ್ನ ಪತ್ನಿಯಾಗುವವಳನ್ನು ನಾನೇ ಹುಡುಕಿಕೊಳ್ಳುತ್ತೇನೆ!.
- ಅಪ್ಪ: ಆದರೆ, ಆ ಹುಡುಗಿ ಬಿಲ್ ಗೇಟ್ಸ್‌ನ ಪುತ್ರಿ.
- ಮಗ: ಹೌದಾ... ವಿಷಯ ಹೀಗಿದ್ದರೆ ಓ...ಕೆ.
ನಂತರ ಅಪ್ಪ ಬಿಲ್‌ಗೇಟ್ಸ್ ಅವರಲ್ಲಿ ಪ್ರಸ್ತಾಪ ಇಡುತ್ತಾನೆ.
- ಅಪ್ಪ: ನಿಮ್ಮ ಮಗಳಿಗೆ ನನ್ನ ಬಳಿ ಗಂಡನಿದ್ದಾನೆ.
- ಬಿಲ್‌ಗೇಟ್ಸ್: ಆದರೆ, ನನ್ನ ಮಗಳಿಗಿನ್ನೂ ಮದುವೆಯ ವಯಸ್ಸಾಗಿಲ್ಲ!
- ಅಪ್ಪ: ಆದರೆ, ಈ ಯುವಕ ವಿಶ್ವಬ್ಯಾಂಕ್‌ನ ಉಪಾಧ್ಯಕ್ಷ.
- ಬಿಲ್‌ಗೇಟ್ಸ್: ಆಹಾ.. ವಿಷಯ ಹೀಗಿದ್ದರೆ ಓ...ಕೆ.
ಅಂತಿಮವಾಗಿ ಅಪ್ಪ ವಿಶ್ವಬ್ಯಾಂಕ್‌ನ ಅಧ್ಯಕ್ಷನನ್ನು ಕಾಣಲು ಹೋಗುತ್ತಾನೆ.
- ಅಪ್ಪ: ವಿಶ್ವಬ್ಯಾಂಕ್ ಉಪಾಧ್ಯಕ್ಷರಾಗಿ ಶಿಫಾರಸು ಮಾಡಲು ನನ್ನ ಬಳಿ ಒಬ್ಬ ಯುವಕನಿದ್ದಾನೆ.
- ಅಧ್ಯಕ್ಷ: ಆದರೆ, ನಮ್ಮಲ್ಲಿ ಈಗಾಗಲೇ ಅಗತ್ಯಕ್ಕಿಂತ ಹೆಚ್ಚಿನ ಉಪಾಧ್ಯಕ್ಷರಿದ್ದಾರೆ.
- ಅಪ್ಪ: ಆದರೆ, ಈ ಯುವಕ ಬಿಲ್ಗೆತ್ಸ್ ಅಳಿಯ.
- ಅಧ್ಯಕ್ಷ: ಹೌದಾ... ವಿಷಯ ಹೀಗಿದ್ದರೆ ಓ..ಕೆ.!
ನೋಡಿ ಸ್ವಾಮಿ ವ್ಯವಹಾರ ಮಾಡುವುದು ಎಂದರೆ ಹೀಗೆ!.
ನೀತಿ: ನಿಮ್ಮಲ್ಲಿ ಏನೂ ಇಲ್ಲದಿದ್ದರೂ, ಏನಾದರೂ ನೀವು ಪಡೆದುಕೊಳ್ಳಬಹುದು. ಆದರೆ, ಪಾಸಿಟಿವ್ ಆಗಿರಬೇಕು.
-----------------------------
ಮಾರ್ಕೆಟಿಂಗ್ ಎಂದರೇನು?
ನೀವು ಪಾರ್ಟಿಯಲ್ಲಿ ಸುಂದರವಾದ ಯುವತಿಯನ್ನು ನೋಡುತ್ತೀರಿ ಎಂದುಕೊಳ್ಳಿ. ಆಕೆಯ ಬಳಿಗ ಹೋಗಿ ಕೇಳಿ, ನಾನು ತುಂಬಾ ಶ್ರೀಮಂತ. ನನ್ನನ್ನು ಮದುವೆಯಾಗ್ತೀಯಾ!? - ಅದು ಮರ್ಕೆಟಂಗ್.

ಅಂತೆಯೇ ನೀವು ಸ್ನೇಹಿತರೊಂದಿಗೆ ಇದ್ದಾಗ ಸುಂದರವಾದ ಹುಡುಗಿಯನ್ನು ಕಂಡರೆ, ನಿಮ್ಮಲ್ಲಿದ್ದ ಒಬ್ಬ ಸ್ನೇಹಿತ ಆಕೆಯ ಬಳಿ ಹೋಗಿ, ನನ್ನ ಸ್ನೇಹಿತ ತುಂಬಾ ಧನಿಕ. ಆತನನ್ನು ಮದುವಯಾಗುವಿರಾ ಎಂದು ಕೇಳಿದರೆ- ಅದು ಜಾಹಿರಾತು.

ಪಾರ್ಟಿಯಲ್ಲಿ ಕಂಡ ಯುವತಿಯಿಂದ ಫನ್ ನಂಬರ್ ಪಡದು, ದಿನ ಕಳೆದ ನಂತರ ಫೋನ್‌ನಲ್ಲಿ ಮಾತನಾಡಿ, ಮದುವೆಯಾಗುವೆಯಾ ಎಂದು ಕೇಳಿದರೆ ಅದು- ಟೆಲಿ ಮಾರ್ಕೆಟಿಂಗ್.


ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯ ಬಳಿ ಹೋಗಿ, ಪಾನೀಯ ಕುಡಿಸಿ, ಆಕೆ ಕೆಳಗೆ ಬೀಳಿಸಿದ ಬ್ಯಾಗ್ ಅನ್ನು ಎತ್ತಿಕಟ್ಟು ಕಾರ್‌ನಲ್ಲಿ ಕೂರಿಸಿಕಂಡು ಮನೆಗೆ ಕರೆದುಕೊಂಡು ಹೋಗುವಾಗ, ಮದುವೆಯಾಗವೆಯಾ ಎಂದು ಕೇಳಿದರೆ
- ಅದು ಸಾರ್ವಜನಿಕ ಸಂಪರ್ಕ.

ನೀವು ಪಾರ್ಟಿಯಲ್ಲಿ ಕಂಡ ಸುಂದರ ಯುವತಿ, ತಾನಾಗಿಯೇ ನಿಮ್ಮ ಬಳಿಗೆ ಬಂದು ನೀವು ತುಂಬಾ ಧನಿಕರಿದ್ದೀರಿ. ನಾನು ನಿಮ್ಮನ್ನು ಮದುವೆಯಾಗಲು ಇಚ್ಚಿಸುತ್ತೇನೆ ಎಂದು ಕೇಳಿದರೆ- ಅದು ಬ್ರಾಂಡ್ ರೆಕಗ್ನಿಷನ್.

ಪಾರ್ಟಿಯಲ್ಲಿ ಕಂಡ ಸುಂದರ ಯುವತಿಯನ್ನು ಮದುವಯಾಗುವೆಯ ಎಂದು ನೀವು ನೇರ ನೇರ ಕೇಳುತ್ತೀರಿ. ಆಗ ಆಕೆ ನಿಮ್ಮ ಕೆನ್ನೆಗೆ ನಯವಾಗಿ ಏಟು ಕೊಟ್ಟರೆ- ಅದು ಗ್ರಾಹಕರ ಫೀಡ್‌ಬ್ಯಾಕ್!.

Sunday, December 14, 2008

ಸುಂಕ ಗೀತೆ !

ಮೊನ್ನೆ ಮೇಲ್ ಚೆಕ್ ಮಾಡಿದ ಸಂದರ್ಭದಲ್ಲಿ ಒಂದು ಆಶ್ಚರ್ಯ ಕಾದಿತ್ತು. ಅದಕ್ಕೆ ಕಾರಣವಾದವರು ಸ್ನೇಹಿತ, ಬೆಂಗಳೂರಿನಲ್ಲಿ ಕಂಪ್ಯೂಟರ್‌ನೊಂದಿಗೆ ತೆಂಕಣ- ಬಡಗಣ ನೋಡುತ್ತಿರುವ ಟಿ.ವೈ. ಪ್ರಸಾದ್. ಅವರು ಕಳುಹಿಸಿದ್ದ ಟ್ಯಾಕ್ಸ್ ಪೊಯಮ್ ನನ್ನನ್ನು ಸಾಕಷ್ಟು ಚಿಂತನೆಗೆ ಹಚ್ಚಿತು. ಆ ಇಂಗ್ಲಿಷ್ ಪೊಯಂ ಅನ್ನು ನಾನು ಇಲ್ಲಿ ಸುಂಕ ಗೀತೆಯಾಗಿ ಇಲ್ಲಿ ಅನುವಾದ ಮಾಡುವ ಪ್ರಯತ್ನ ಮಾಡಿದ್ದೇನೆ. ಓದಿ ನೋಡಿ, ನಾವು ಎಷ್ಟೊಂದು ಸುಂಕದೊಳಗೆ ಜೀವನ ನಡೆಸುತ್ತಿದ್ದೇವೆ ಎಂಬುದರ ಮೇಲೆ ಈ ಗೀತೆ ಬೆಳಕು ಚೆಲ್ಲುತ್ತದೆ... ನಿಮಗೆ ಇದು ಹಾಸ್ಯ ಎಂಬ ಆಶ್ಚರ್ಯವೂ ಉಂಟಾಗಬಹುದು...

ಅವನ ನೆಲಕ್ಕೂ ತೆರಿಗೆ
ಅವನ ಹಾಸಿಗೆಗೂ ತರಿಗೆ
ಆತ ತಿನ್ನುತ್ತಿರುವ ಟೇಬಲ್‌ಗೂ ತೆರಿಗೆ

ಅವನ ಟ್ರಾಕ್ಟರ್‌ಗೂ ತೆರಿಗೆ
ಅವನ ಹೇಸರಗತ್ತೆಗೂ ತೆರಿಗೆ
ಅವನಿಗೆ ಕಲಿಸಲು, ನಿಯಮಗಳನ್ನು ಹೇಳಲು ತೆರಿಗೆ

ಅವನ ಕೆಲಸಕ್ಕೂ ತೆರಿಗೆ
ಅವನ ಸಂಬಳಕ್ಕೂ ತೆರಿಗೆ
ಅಂತೂ ಇಂತೂ ಅವನು ಕೆಲಸ ಮಾಡಿದರೆ
ಅಂತಿಮವಾಗಿ ಸಿಗುವುದು ಶೇಂಗಾವಷ್ಟೆ!

ಅವನ ದನಕ್ಕೂ ತೆರಿಗೆ
ಅವನ ಕುರಿಗೂ ತೆರಿಗೆ
ಅವನ ಪ್ಯಾಂಟ್‌ಗೂ ತೆರಿಗೆ
ಅವನ ಟೈಗೂ ತೆರಿಗೆ
ಅವನ ಶರ್ಟಿಗೂ ತೆರಿಗೆ
ಅವನ ಕಸಕ್ಕೂ ತೆರಿಗೆ

ಅವನ ತಂಬಾಕಿಗೂ ತೆರಿಗೆ
ಅವನ ಕುಡಿತಕ್ಕೂ ತೆರಿಗೆ
ಅವನು ಚಿಂತಿಸಲು ಪ್ರಯತ್ನಿಸಿದರೂ ತೆರಿಗೆ!

ಅವನ ಸಿಗರೇಟಿಗೂ ತೆರಿಗೆ
ಅವನ ಬಿಯರ್‌ಗೂ ತೆರಿಗೆ
ಅವನು ಅತ್ತನೆಂದರೆ ಅನ ಕಣ್ಣೀರಿಗೂ ತೆರಿಗೆ

ಅವನ ಕಾರಿಗೂ ತೆರಿಗೆ
ಅವನ ಅನಿಲಕ್ಕೂ ತೆರಿಗೆ
ಇತರೆ ಮಾರ್ಗ ಹುಡುಕ ಹೋದರೆ ಅವನ ಪುಷ್ಠಕ್ಕೂ ತೆರಿಗೆ
ಏನೇನು ತೆರಿಗೆ ಇದೆ ಎಂದು ತಿಳಿದುಕೊಳ್ಳಲು
ಹದರೆ ಅವನಿಗೆ ಅದಕ್ಕೂ ತರಿಗೆ!

ಅಂತಿಮವಾಗಿ ಅವನ ಶವಸಂಸ್ಕಾರಕ್ಕೂ ತೆರಿಗೆ
ಅದನ್ನ ಮಾಡಿದ ನೆಲಕ್ಕೂ ತೆರಿಗೆ
ಆತನ ಸಮಾದಿಯ ಮೇಲೆ ಹೀಗೆ ಬರೆಯಬೇಕು-
ನನ್ನನ್ನು ಕೊನೆವರೆಗೂ ತೆರಿಗೆ ಸವಾರಿ ಮಾಡಿತು...

ಆತನ ಪ್ರಾಣ ಹೋಯಿತಂದರೆ
ಆಗಲೂ ವಿಶ್ರಾಂತಿ ಇಲ್ಲ,
ಅದು ಆತ ಹೊಂದಿದ್ದ ಪಿತ್ರಾರ್ಜಿತ
ಆಸ್ತಿ ಮೇಲೆ ತೆರಿಗೆ ಹಾಕಲು ಸುಸಂದರ್ಭ!

ಅಕೌಂಟ್ಸ್ ರಿಸಿವೇಬಲ್ ಟ್ಯಾಕ್ಸ್
ಏರ್‌ಲೈನ್ ಸರ್ಚಾಜ್ ಟ್ಯಾಕ್ಸ್
ಏರ್‌ಲೈನ್ ಫ್ಯೂಯೆಲ್ ಟ್ಯಾಕ್ಸ್
ಏರ್‌ಪೋರ್ಟ್ ನಿರ್ವಹಣಾ ತೆರಿಗೆ
ಕಟ್ಟಡ ಅನುಮತಿ ತೆರಿಗ
ಸಿಗರೇಟ್ ತೆರಿಗೆ
ಕಾರ್ಪೋರೇಟ್ ಆದಾಯ ತೆರಿಗೆ
ಮರಣ ತೆರಿಗೆ
ನಾಯಿ ಹೊಂದಲು ಪರವಾನಗಿ ತೆರಿಗೆ
ವಾಹನ ಅನುಮತಿ ತೆರಿಗೆ
ಎಕ್ಸೈಸ್ ತೆರಿಗೆ
ಫೆಡರಲ್ ಆದಾಯ ತರಿಗೆ
ಫೆಡರಲ್ ಅನ್‌ಎಂಪ್ಲಾಯಮೆಂಟ್ (ಯುಐ)
ಫಿಶಿಂಗ್ ಪರವಾನಗಿ ತೆರಿಗೆ
ಆಹಾರ ಪರವಾನಗಿ ತೆರಿಗೆ
ಪೆಟ್ರಲ್ ತೆರಿಗೆ
ಗ್ರಾಸ್ ರಿಸಿಪ್ಟ್ಸ್ ತೆರಿಗೆ
ಆರೋಗ್ಯ ತೆರಿಗೆ
ಬೇಟೆಯಾಡಲು ಪರವಾನಗಿಗೆ ತೆರಿಗೆ
ಹೈಡ್ರೋ ತೆರಿಗೆ
ಪಿತ್ರಾರ್ಜಿತ ಆಸ್ತಿಗೆ ತೆರಿಗೆ
ಬಡ್ಡಿ ತೆರಿಗೆ
ಮದ್ಯ ತೆರಿಗೆ
ಐಷಾರಾಮಿ ತೆರಿಗೆ
ವಿವಾಹ ಅನುಮತಿ ತರಿಗೆ
ವೈದ್ಯಕೀಯ ಸೌಲಭ್ಯಕ್ಕೆ ತೆರಿಗೆ
ಮಾರ್ಟೇಜ್ ತೆರಿಗೆ
ವೈಯಕ್ತಿಕ ಆದಾಯ ತರಿಗೆ
ಆಸ್ತಿ ತೆರಿಗೆ
ಬಡತನ ತೆರಿಗೆ
ಔಷಧಿಗಳಿಗೆ ತೆರಿಗೆ
ಪ್ರಾವಿನಿಷಿಯಲ್ ಆದಾಯ ತರಿಗೆ
ರಿಯಲ್ ಎಸ್ಟೇಟ್ ತೆರಿಗ
ರೀಕ್ರಿಯೇಷನಲ್ ವಾಹನ ತೆರಿಗೆ
ರೀಟೇಲ್ ಸೇಲ್ಸ್ ತೆರಿಗೆ
ಸರ್ವಿಸ್ ಚಾರ್ಜ್ ತೆರಿಗೆ
ಶಾಲಾ ತೆರಿಗೆ
ದೂರವಾಣಿ ತೆರಿಗೆ
ದೂರವಾಣಿ, ಪ್ರಾವಿನ್ಸಿಯಲ್ ಮತ್ತು ಸರ್‌ಚಾರ್ಜ್ ತೆರಿಗೆ
ದೂರವಾಣಿ ಕನಿಷ್ಟ ಬಳಕೆಗೆ ಸರ್ಚಾರ್ಜ್ ತೆರಿಗೆ
ವಾಹನ ಪರವಾನಗಿ ನೋಂದಣಿ ತೆರಿಗೆ
ನೀರಿನ ಕಂದಾಯ
ವಾಟರ್‌ಕ್ರಾಫ್ಟ್ ನೋಂದಣಿ ತೆರಿಗೆ
ವಾಹನ ಮಾರಾಟ ತೆರಿಗೆ
ಬಾವಿ ತೆಗೆಯಲು ಅನುಮತಿ ತೆರಿಗೆ
ಕಾರ್ಮಿಕರ ಪರಿಹಾರ ತೆರಿಗೆ
ನೀವು ಇನ್ನೂ ಇದು ಹಾಸ್ಯ ಎಂದು ಯೋಚಿಸುತ್ತಿದ್ದೀರಾ?

ನಿಮಗೂ ಗೊತ್ತು ನಮ್ಮ ದೇಶದಲ್ಲಿ ೧೦೦ ವರ್ಷಗಳ ಹಿಂದೆ ಯಾವುದೇ ಸುಂಕ/ ತೆರಿಗೆ ಇರಲಿಲ್ಲ. ಒಂದರ್ಥದಲ್ಲಿ ನಾವು ಅಭಿವೃದ್ಧಿ ಹೊಂದುತ್ತಿರುವ ದೇಶದವರಾಗಿದ್ದೆವು. ದೇಶದ ಮೇಲೆ ಯಾವುದೇ ಸಾಲವೂ ಇರಲಿಲ್ಲ. ಸಾಕಷ್ಟು ಮಧ್ಯಮವರ್ಗದವರೇ ವಾಸಿಸುತ್ತಿರುವ ನಮ್ಮಲ್ಲಿ ಆಗ; ತಾಯಂದಿರು ಮನೆಯಲ್ಲಿಯೇ ಇದ್ದುಕೊಂಡು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳಿಗಾಗಿ ಮನೆಯಲ್ಲಿಯೇ ಇರುತ್ತಿದ್ದರು!

ಆದರೆ ಈಗ ಏನಾಗಿದೆ?
ಎಲ್ಲರೂ ಜೋರಾಗಿ ಹೇಳಿ, ಇದಕ್ಕೆ ಕಾರಣರು ಯಾರು?
ಉತ್ತರ- ರಾಜಕಾರಣಿಗಳು?!

Thursday, December 4, 2008

ಅಯ್ಯಪ್ಪಸ್ವಾಮಿ ಎಂದರೆ ಆಕೆ ನೆನಪಾಗುತ್ತಾರೆ...!


ಮತ್ತೊಂದು `ಅಯ್ಯಪ್ಪನ ಋತು' ಬಂದಿದೆ. ಈ ಸಂದರ್ಭದಲ್ಲಿ ನಮ್ಮೂರಿನಲ್ಲಿ ನಡೆದ ದುರಂತ ಕಥೆ ನೆನಪಾಗುತ್ತದೆ; ಕಾಡುತ್ತದೆ. ಆಗ ಆಕೆ ನೆನಪಾಗುತ್ತಾರೆ!
ಏನಾಗಿತ್ತು ಎಂದರೆ - ಅದೊಂದು ಪುಟ್ಟ ಕುಂಟುಂಬ. ಯಜಮಾನ ಜಯಣ್ಣ ನಾಲೆಯಲ್ಲಿ ನೀರು ಬಿಡುವ ಕೆಲಸ ಮಾಡುವವನು- ಸರ್ಕಾರಿ ಕೆಲಸ. ಪತ್ನಿ ಗೃಹಿಣಿ. ಒಂದು ಗಂಡು- ಒಂದು ಹೆಣ್ಣು. ಶಾಲೆಗ ಹೋಗುತ್ತಿದ್ದವು.
ಈಚೆಗೆ ಸುಮಾರು ೯-೧೦ ವರ್ಷಗಳ ಹಿಂದಿನ ಕಥೆ ಅದು. ಅವರ ಮನೆಯಲ್ಲಿ ಸಂಭ್ರಮವಿತ್ತು; ಭಕ್ತಿಯೂ ಇತ್ತು. ಮನೆಯವರು ಶಬರಿಮಲೆಗೆ ಹೋಗುತ್ತಿದ್ದಾರೆ. ಹಲವಾರು ದಿನಗಳಿಂದ ಮನೆಯ ಸಹವಾಸಕ್ಕೆ ಬಂದೇ ಇಲ್ಲ. ಭಕ್ತಿಯಲ್ಲಿ ಮಿಂದುತ್ತಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ. ಭಜನೆ ಮಾಡುತ್ತಾರೆ.
ದೇವರು ಕೊನೆಗೂ ಭಕ್ತಿ ಭಾವನೆ ಬೆಳೆಸಿದ್ದಾನೆ ಎಂದು ಆಕೆ ಖುಷಿ ಪಟ್ಟಿದ್ದರು. ಊರಿನಲ್ಲಿ ಯಾರ ಸಹವಾಸಕ್ಕೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದ ಅವರು, ಮಾಲೆ ಧರಿಸಿದ್ದ ಸಂದರ್ಭದಲ್ಲಿ ಮತ್ತಷ್ಟು ಮೌನಿಯಾಗಿದ್ದರು.
ಅಂತೂ ಒಂದು ವಾರ ಕಳೆದಿತ್ತು. ಇರುಮುಡಿಯನ್ನು ಕಟ್ಟಲು ಭರ್ಜರಿಯಾಗಿ ಕಾರ್ಯಕ್ರಮವೂ ನಡೆಯಿತು. ಸಂಬಂಧಿಕರು, ಮನೆಮಂದಿ ಎಲ್ಲಾ ಶುಭ ಹಾರೈಸಿ ಅವರನ್ನು ಶಬರಿಮಲೆ ಬಸ್ಸು ಹತ್ತಿಸಿದ್ದರು. ಇತ್ತ ಮಕ್ಕಳು, ನಮ್ಮಪ್ಪ ಶಬರಿಮಲೆಗೆ ಹೋಗಿದ್ದಾರೆ. ಒಂದಷ್ಟು ಆಟಿಕೆಗಳು, ಬಟ್ಟೆ ಬರೆ, ತಿನಿಸುಗಳನ್ನು ತರಬಹುದು ಎಂಬ ಕಾತರದಲ್ಲಿ ದಾರಿ ಕಾಯುತ್ತಿದ್ದರು. ಅಬ್ಬಬ್ಬಾ ಎಂದರೆ ಒಂದು ವಾರ ಕಾಲ ಪ್ರವಾಸವಿರುತ್ತದೆ. ನಂತರ ಬರುತ್ತೇನೆ ಎಂದು ಹೇಳಿ ಹೋಗಿದ್ದರು ಆತ.
ವಾರವಾಯಿತು. ಹತ್ತು ದಿನವಾಯ್ತು. ಅರ್ಧ ತಿಂಗಳಾಯ್ತು. ತಿಂಗಳೂ ತುಂಬಿತು. ಜಯಣ್ಣನ ಸುಳಿವಿಲ್ಲ. ಸಂಪರ್ಕಕ್ಕೆ ದೂರವಾಣಿ ಇಲ್ಲ. ಮೊಬೈಲ್ ಅಂತೂ ದೂರದ ಮಾತು. ಅವರ ಪತ್ನಿಗೆ ಗಾಬರಿಯಾಯಿತು. ಗಂಡ ಏನಾದರೋ ಏನೋ? ಶಬರಿ ಮಲೆಗೆ ಹೋಗಿ ಬರುವುದಾಗಿ ಹೇಳಿದವರು ತಿಂಗಳಾದರೂ ಬಂದಿಲ್ಲ; ಅವರ ಸಂಕಟ ಆರಂಭವಾಗಿದ್ದೇ ಅಂದಿನಿಂದ. ಹುಡುಕಿದರು. ಹುಡುಕಿಸಿದರು. ಪೊಲೀಸರಿಗೆ ದೂರು ನೀಡಿದರು. ಸಂಬಂಧಿಕರಂದಿಗೆ ಶಬರಿಮಲೆಗೂ ಹೋಗಿ ಬಂದದ್ದಾಯಿತು. ಅಷ್ಟೊಂದು ಭಕ್ತರಿರುವ
ಶಬರಿಮಲಯಲ್ಲಿ ಜಯಣ್ಣರೊಬ್ಬರನ್ನು ಹುಡುಕುವುದು ಸುಲಭವೇನಲ್ಲ. ಎಷ್ಟು ದಿನವೆಂದು ಅಳುತ್ತಾ ಕೂರಲಾಗುವುದು? ಅಳುವುದಕ್ಕೆ ಕಣ್ಣೀರು ಸಹ ಇರಲಿಲ್ಲ; ದಿನ ಅಳುವವರಿಗೆ ಕಣ್ಣೀರು ಉತ್ಪತ್ತಿ ಮಾಡುವವರ್‍ಯಾರು?
ದಿನ ಕಳೆದವು. ಮೂರು ತಿಂಗಳಾಯಿತು, ವರ್ಷವಾಯಿತು. ಊರಿನವರೆಲ್ಲಾ ಅವರ ಸ್ಥಿತಿ ಕಂಡು ಮರುಗಿದರು. ಮುಖಂಡರು ಸಂಗತಿಯನ್ನು ನೀರಾವರಿ ಇಲಾಖೆಯ ಗಮನಕ್ಕೆ ತಂದರು. ಕಾಡಿಬೇಡಿದ್ದರಿಂದಾಗಿ, ಪತಿಯ ಕೆಲಸ ಪತ್ನಿಗೆ ಸಿಕ್ಕಿತು. ಗಂಡ ಬದುಕಿದ್ದಾನೋ, ಸತ್ತಿದ್ದಾನೋ ಏನೋ ಎಂಬ ಗೊಂದಲದಲ್ಲಿ ಇರುವ ಆಕೆ ಯಾವಾಗಲೂ ಮುಡಿ ತುಂಬ ಹೂವು ಮುಡಿಯುತ್ತಾರೆ. ಆಕೆಗೆ ನೀರಾವರಿ ಇಲಾಖೆಯು ಮೈಸೂರು ಕಚೇರಿಯಲ್ಲಿ ಸಹಾಯಕಿಯ ಕೆಲಸ ನೀಡಿದೆ.
ಈ ಎಲ್ಲದರ ನಡುವೆ ಮಕ್ಕಳು ಅಪ್ಪ ಏನಾದನೋ ಎಂಬ ಚಿಂತಯಲ್ಲಿಯೇ ಬೆಳೆದು ದೊಡ್ಡವರಾಗಿದ್ದಾರೆ. ಒಂದಷ್ಟು ಓದಿಕಂಡು, ತಾಯಿಯೊಂದಿಗೆ ಕುಟುಂಬ ನಿರ್ವಹಣೆಗೆ ಕೈಜೋಡಿಸಲು ಕೈಲಾದ ಕೆಲಸ ಮಾಡುತ್ತಿದ್ದಾರೆ. ಆಕೆ, ಸಹಾಯಕಿ ಕೆಲಸ ಮಾಡಿಕಂಡೇ ಜೀವನ ಸಾಗಿಸುತ್ತಿದ್ದಾರೆ. ಬೆಳೆದು ನಿಂತ ಮಗಳ ಮದುವೆ ಮಾಡಿ ಮುಗಿಸಿದ್ದಾರೆ. ಮಗ ಇದ್ದಾನೆ. ಮುರುಗೇಶ. ಸಹಜವಾಗಿಯೇ ಆತ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾನೆ. ಆಗಾಗ ಬಂದು ತಾಯಿಯನ್ನು ನೋಡಿ ಹೋಗುತ್ತಾನೆ. ಆಕೆಯ ಅಕ್ಕನಿಗೂ ಒಂದು ಮಗುವಾಗಿದೆ.
ಮಗ-ಮಗಳು ಬೆಳೆದು ದೊಡ್ಡವರಾಗಿದ್ದಾರೆ. ಮಗಳಿಗೆ ಮದುವೆಯೂ ಆಗಿದೆ. ಮೊಮ್ಮಗು ಸಹ ಇದೆ. ಆದರ, ಜಯಣ್ಣನ ಸುಳಿವಿಲ್ಲ! ಆಕೆ, ಕೆಲಸ ಮಾಡುತ್ತಿದ್ದಾರೆ- ಪತಿಯ ನೆನಪಿನಲ್ಲಿ- ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂಬ ಭಾವನೆಯಲ್ಲಿ! ಜಯಣ್ಣ ಏನಾದನೋ? ಎಲ್ಲಿ ಹೋದನೋ ಇನ್ನೂ ಗೊತ್ತಿಲ್ಲ. ಆದರೆ, ಅವರ ಕುಟುಂಬ ಮಾತ್ರ ಅವರು ಬರುತ್ತಾರೆ ಎಂದು ನಂಬಿದೆ. ಊರಿನವರು ಮಾತ್ರ ಆತನ ಕಥೆ ಮುಗಿದು ಹೋಗಿದೆ ಎಂದುಕೊಂಡಿದ್ದಾರೆ.
ಇಂತಹ ಕಥೆ ಕೇಳಿದರೆ, ಮನಸ್ಸು ಒದ್ದೆಯಾಗದೆ ಇರಲಿಕ್ಕಿಲ್ಲ. ಡಿಸೆಂಬರ್- ಜನವರಿ ಬಂತೆಂದರೆ ಈ ಘಟನೆ ಮನಸ್ಸು ತಟ್ಟುತ್ತದೆ. ಶಬರಿಮಲೆಯ ಅಯ್ಯಪ್ಪ- ನಿನ್ನ ನೋಡಲು ಬಂದ ಭಕ್ತರಿಗೆ ಈ ಶಿಕ್ಷ ನೀಡುವುದೇ ಎಂಬ ಪ್ರಶ್ನೆ ಬರುತ್ತದೆ. ಅಯ್ಯಪ್ಪ ಉತ್ತರಿಸುತ್ತಾನಾ?! (ನಮ್ಮ ಹರೀಶಣ್ಣ ಅಯ್ಯಪ್ಪಸ್ವಾಮಿ ಕಾಣಲು ಶಬರಿಮಲೆಗೆ ಹೋಗಿದ್ದಾರೆ. ಸುಖವಾಗಿ ಇದ್ದು ಬರಲಿ ಎಂಬ ಆಶಯದಲ್ಲಿ ಬರೆದದ್ದು...)

Tuesday, December 2, 2008

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ..!


ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ನಮ್ಮ ವ್ಯವಸ್ಥೆಗೆ
ಅನ್ವಯವಾಗುತ್ತದೆ. ಏಕೆಂದರೆ, ನಮ್ಮ ಸರ್ಕಾರಗಳು ಎಚ್ಚರಗೊಳ್ಳವುದು ಎಲ್ಲವೂ ಮುಗಿದ ಮೇಲಷ್ಟೆ.
ಅನಾಹುತಗಳು ಆದ ನಂತರ ಬಂದು ಸ್ಥಳ ಪರಿಶೀಲನೆ ಮಾಡುವ ಪೊಲೀಸರು, ಅದನ್ನು ಮುಂಚೆಯೇ
ತಡೆಯುವಲ್ಲಿ ವಿಫಲರಾಗುತ್ತಾರೆ. ಅಷ್ಟಕ್ಕೂ, ಅಷ್ಟು ವ್ಯವಸ್ಥೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಇಲ್ಲ ಎಂಬ
ಸತ್ಯವನ್ನು ನಾವು ನಂಬಲೇಬೇಕು. ಇದು ಮುಂಬೈನಲ್ಲಿ ನಡೆದ ಉಗ್ರರ ಅಟ್ಟಹಾಸದಿಂದಾಗ ಅನಾಹುತಕ್ಕೂ
ಅನ್ವಯವಾಗುವುದಿಲ್ಲವೇ?

ಆದರೆ.... ಅನಾಹುತದಿಂದ ಆಗುವ ಪ್ರಾಣಹಾನಿ, ಆಸ್ತಿಹಾನಿಗಳನ್ನು ತುಂಬಿಕೊಡುವವರು ಯಾರು?
ಘಟನೆ ನಡೆಯಿತು ಎಂಬ ಕಾರಣಕ್ಕೆ ಗೃಹಮಂತ್ರಿಯೊಬ್ಬರು ರಾಜೀನಾಮೆ ನೀಡುವುದರಿಂದ, ಈಗಾಗಲೇ
ನಷ್ಟ ತುಂಬಲಾದೀತೆ?! ಹಾಗೆ ನೋಡಿದರೆ, ಹುತಾತ್ಮ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು ಹೇಳಿರುವ ಹೇಳಿಕೆ ತಾಕತ್ತಿನದು. ಇದೇ ವಿಷಯವನ್ನು ಇಟ್ಟುಕೊಂಡು ರಾಜಕರಣಿಗಳು ಮೈಲೇಜ್ ತೆಗೆದುಕೊಳ್ಳಬಾರದು ಎಂಬ ಸಮರ್ಪಕವಾದ ಹೇಳಿಕೆಯನ್ನು ಅವರು ನೀಡಿದ್ದಾರೆ. ಅವರಲ್ಲಿ ಪುತ್ರನನ್ನು ಕಳೆದುಕೊಂಡ ನೋವಿದೆ. ನೋವಿನಲ್ಲಿ ಆಡುವ ಮಾತುಗಳ ತೀವ್ರತೆ ಹೆಚ್ಚು; ಪರಿಣಾಮ ಚೂರಿ ಇರಿದಂತೆಯೇ ಇರುತ್ತದೆ. ಅದು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲವೇಕೆ? ಇದನ್ನು ತಿಳಿಯದೆ, ಸಂದೀಪ್ ಮೇಜರ್ ಅಲ್ಲದಿದ್ದರೆ ಅವರ ಮನೆಗೆ ನಾಯಿಯೂ ಹೋಗುತ್ತಿರಲಿಲ್ಲ ಎಂಬ ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದಗೆ ಏನೆನ್ನಬೇಕು? ಧಿಕ್ಕಾರ ಹಾಕುವುದು ಬಿಟ್ಟರೆ ಬೇರೆ ಮಾತುಗಳನ್ನು ಆಡಬೇಕಿಲ್ಲ.

ನಾವು ಶೂರರು..
ಊರೆಲ್ಲಾ ಕೊಳ್ಳೆಯಾದ ಮೇಲೆ ನಾವು ಶೂರರು ಎಂದು ಎಲ್ಲರೂ ಕೊಚ್ಚಿಕೊಳ್ಳುತ್ತಿದ್ದಾರೆ. ನಾವು ಇಷ್ಟು ಪಡೆ ಹೊಂದಿದ್ದೇವೆ. ಇಷ್ಟ ಆಯುಧಗಳಿವೆ ಎಂದು ಪ್ರದರ್ಶಿಸುತ್ತಿದ್ದಾರೆ. ಇದರ ಬದಲಿಗೆ ನಮ್ಮ ಒಳಗಡೆಯೇ ಇರುವ ಉಗ್ರರನ್ನು ಪತ್ತೆ ಹಚ್ಚಲು ಏಕೆ ಸಾಧ್ಯವಾಗುತ್ತಿಲ್ಲ? ಈಗಾಗಲೇ ಬಂಧಿತರಾಗಿರುವ ಉಗ್ರರ ವಿಚಾರಣೆಗಳನ್ನು ವಿಳಂಬ ಮಾಡುತ್ತಿರುವುದು ಏಕೆ? ಅವರಿಗೆ ಊಟ- ಉಪಚಾರ ಮಾಡಿಕೊಂಡು ಸುರಕ್ಷಿತವಾದ ಜಾಗದಲ್ಲಿ ಇರಿಸಿ, ವಿಐಪಿಗಳಂತೆ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದು ಸಾಕುತ್ತಿರುವುದಾದರೂ ಏಕೆ ಎಂಬ ಬಗ್ಗೆ ಚರ್ಚೆಯಾಗಬೇಕಿದೆ. ಇದೇ ಸಂಗತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾತನಾಡುವವರಿಗೆ, ಮಾಡುವವರಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸಬೇಕಿದೆ.

ಕಮಾಂಡೋಗಳಿಗೆ ಏನಿದೆ?
ಮುಂಬೈ ಘಟನೆಯಿಂದ ತಲ್ಲಣಗೊಂಡಿದ್ದ ಇಡೀ ದೇಶ ಸಹಜ ಸ್ಥಿತಿಗೆ ಮರಳಲು ಎನ್‌ಎಸ್‌ಜಿ ಕಮಾಂಡೋಗಳು ಕಾರಣರಾಗಿದ್ದಾರೆ. ಅಲ್ಪ ಸೌಲಭ್ಯದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರಿಗೆ ನಮ್ಮದೊಂದು ಸಲ್ಯೂಟ್ ಇರಲಿ. ಅವರನ್ನು ಮತ್ತಷ್ಟು ಬಲಪಡಿಸುವ ಕ್ರಮಗಳನ್ನು
ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮುಂಬೈ ಘಟನೆ ಮರುಕಳಿಸದಂತೆ ನೋಡಿಕೊಳ್ಳವ ಹೊಣೆ ಸರ್ಕಾರದ ಮೇಲಿದೆ. ಹೊಣೆ ಯಾವಾಗಲೂ ಇರುತ್ತದೆ. ಆದರೆ, ಅದನ್ನು ಸರ್ಕಾರಗಳು, ಪೊಲೀಸ್ ವ್ಯವಸ್ಥೆ, ಗುಪ್ತಚರ ದಳಗಳು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸುತ್ತಿವೆ?