Tuesday, December 2, 2008

ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ..!


ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ನಮ್ಮ ವ್ಯವಸ್ಥೆಗೆ
ಅನ್ವಯವಾಗುತ್ತದೆ. ಏಕೆಂದರೆ, ನಮ್ಮ ಸರ್ಕಾರಗಳು ಎಚ್ಚರಗೊಳ್ಳವುದು ಎಲ್ಲವೂ ಮುಗಿದ ಮೇಲಷ್ಟೆ.
ಅನಾಹುತಗಳು ಆದ ನಂತರ ಬಂದು ಸ್ಥಳ ಪರಿಶೀಲನೆ ಮಾಡುವ ಪೊಲೀಸರು, ಅದನ್ನು ಮುಂಚೆಯೇ
ತಡೆಯುವಲ್ಲಿ ವಿಫಲರಾಗುತ್ತಾರೆ. ಅಷ್ಟಕ್ಕೂ, ಅಷ್ಟು ವ್ಯವಸ್ಥೆ ನಮ್ಮ ಪೊಲೀಸ್ ಇಲಾಖೆಯಲ್ಲಿ ಇಲ್ಲ ಎಂಬ
ಸತ್ಯವನ್ನು ನಾವು ನಂಬಲೇಬೇಕು. ಇದು ಮುಂಬೈನಲ್ಲಿ ನಡೆದ ಉಗ್ರರ ಅಟ್ಟಹಾಸದಿಂದಾಗ ಅನಾಹುತಕ್ಕೂ
ಅನ್ವಯವಾಗುವುದಿಲ್ಲವೇ?

ಆದರೆ.... ಅನಾಹುತದಿಂದ ಆಗುವ ಪ್ರಾಣಹಾನಿ, ಆಸ್ತಿಹಾನಿಗಳನ್ನು ತುಂಬಿಕೊಡುವವರು ಯಾರು?
ಘಟನೆ ನಡೆಯಿತು ಎಂಬ ಕಾರಣಕ್ಕೆ ಗೃಹಮಂತ್ರಿಯೊಬ್ಬರು ರಾಜೀನಾಮೆ ನೀಡುವುದರಿಂದ, ಈಗಾಗಲೇ
ನಷ್ಟ ತುಂಬಲಾದೀತೆ?! ಹಾಗೆ ನೋಡಿದರೆ, ಹುತಾತ್ಮ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು ಹೇಳಿರುವ ಹೇಳಿಕೆ ತಾಕತ್ತಿನದು. ಇದೇ ವಿಷಯವನ್ನು ಇಟ್ಟುಕೊಂಡು ರಾಜಕರಣಿಗಳು ಮೈಲೇಜ್ ತೆಗೆದುಕೊಳ್ಳಬಾರದು ಎಂಬ ಸಮರ್ಪಕವಾದ ಹೇಳಿಕೆಯನ್ನು ಅವರು ನೀಡಿದ್ದಾರೆ. ಅವರಲ್ಲಿ ಪುತ್ರನನ್ನು ಕಳೆದುಕೊಂಡ ನೋವಿದೆ. ನೋವಿನಲ್ಲಿ ಆಡುವ ಮಾತುಗಳ ತೀವ್ರತೆ ಹೆಚ್ಚು; ಪರಿಣಾಮ ಚೂರಿ ಇರಿದಂತೆಯೇ ಇರುತ್ತದೆ. ಅದು ರಾಜಕಾರಣಿಗಳಿಗೆ ಅರ್ಥವಾಗುತ್ತಿಲ್ಲವೇಕೆ? ಇದನ್ನು ತಿಳಿಯದೆ, ಸಂದೀಪ್ ಮೇಜರ್ ಅಲ್ಲದಿದ್ದರೆ ಅವರ ಮನೆಗೆ ನಾಯಿಯೂ ಹೋಗುತ್ತಿರಲಿಲ್ಲ ಎಂಬ ಬೇಜವಾಬ್ದಾರಿಯ ಹೇಳಿಕೆ ನೀಡಿರುವ ಕೇರಳದ ಮುಖ್ಯಮಂತ್ರಿ ಅಚ್ಯುತಾನಂದಗೆ ಏನೆನ್ನಬೇಕು? ಧಿಕ್ಕಾರ ಹಾಕುವುದು ಬಿಟ್ಟರೆ ಬೇರೆ ಮಾತುಗಳನ್ನು ಆಡಬೇಕಿಲ್ಲ.

ನಾವು ಶೂರರು..
ಊರೆಲ್ಲಾ ಕೊಳ್ಳೆಯಾದ ಮೇಲೆ ನಾವು ಶೂರರು ಎಂದು ಎಲ್ಲರೂ ಕೊಚ್ಚಿಕೊಳ್ಳುತ್ತಿದ್ದಾರೆ. ನಾವು ಇಷ್ಟು ಪಡೆ ಹೊಂದಿದ್ದೇವೆ. ಇಷ್ಟ ಆಯುಧಗಳಿವೆ ಎಂದು ಪ್ರದರ್ಶಿಸುತ್ತಿದ್ದಾರೆ. ಇದರ ಬದಲಿಗೆ ನಮ್ಮ ಒಳಗಡೆಯೇ ಇರುವ ಉಗ್ರರನ್ನು ಪತ್ತೆ ಹಚ್ಚಲು ಏಕೆ ಸಾಧ್ಯವಾಗುತ್ತಿಲ್ಲ? ಈಗಾಗಲೇ ಬಂಧಿತರಾಗಿರುವ ಉಗ್ರರ ವಿಚಾರಣೆಗಳನ್ನು ವಿಳಂಬ ಮಾಡುತ್ತಿರುವುದು ಏಕೆ? ಅವರಿಗೆ ಊಟ- ಉಪಚಾರ ಮಾಡಿಕೊಂಡು ಸುರಕ್ಷಿತವಾದ ಜಾಗದಲ್ಲಿ ಇರಿಸಿ, ವಿಐಪಿಗಳಂತೆ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದು ಸಾಕುತ್ತಿರುವುದಾದರೂ ಏಕೆ ಎಂಬ ಬಗ್ಗೆ ಚರ್ಚೆಯಾಗಬೇಕಿದೆ. ಇದೇ ಸಂಗತಿಯನ್ನು ಮುಂದಿಟ್ಟುಕೊಂಡು ರಾಜಕಾರಣ ಮಾತನಾಡುವವರಿಗೆ, ಮಾಡುವವರಿಗೆ ಸಾರ್ವಜನಿಕರು ತಕ್ಕ ಪಾಠ ಕಲಿಸಬೇಕಿದೆ.

ಕಮಾಂಡೋಗಳಿಗೆ ಏನಿದೆ?
ಮುಂಬೈ ಘಟನೆಯಿಂದ ತಲ್ಲಣಗೊಂಡಿದ್ದ ಇಡೀ ದೇಶ ಸಹಜ ಸ್ಥಿತಿಗೆ ಮರಳಲು ಎನ್‌ಎಸ್‌ಜಿ ಕಮಾಂಡೋಗಳು ಕಾರಣರಾಗಿದ್ದಾರೆ. ಅಲ್ಪ ಸೌಲಭ್ಯದಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರಿಗೆ ನಮ್ಮದೊಂದು ಸಲ್ಯೂಟ್ ಇರಲಿ. ಅವರನ್ನು ಮತ್ತಷ್ಟು ಬಲಪಡಿಸುವ ಕ್ರಮಗಳನ್ನು
ಕೈಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಮುಂಬೈ ಘಟನೆ ಮರುಕಳಿಸದಂತೆ ನೋಡಿಕೊಳ್ಳವ ಹೊಣೆ ಸರ್ಕಾರದ ಮೇಲಿದೆ. ಹೊಣೆ ಯಾವಾಗಲೂ ಇರುತ್ತದೆ. ಆದರೆ, ಅದನ್ನು ಸರ್ಕಾರಗಳು, ಪೊಲೀಸ್ ವ್ಯವಸ್ಥೆ, ಗುಪ್ತಚರ ದಳಗಳು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸುತ್ತಿವೆ?

1 comment:

Anonymous said...

idu janasamanyana bhavanegala pratibimba